ದಾವಣಗೆರೆ: ಸಾಮಾನ್ಯವಾಗಿ ಸಾಫ್ಟ್ವೇರ್ ಎಂಜಿನಿಯರ್ಗೆ ಕೆಲಸ ಸಿಕ್ಕಿದ ತಕ್ಷಣ ಪ್ಯಾಕೇಜ್ ಎಷ್ಟು ಎಂದು ಎಲ್ಲರೂ ಕೇಳೋದು ಕಾಮನ್… ಆದರೆ ಇಲ್ಲೊಬ್ಬ ರೈತನಿಗೆ ವರ್ಷಕ್ಕೆ ನಿಮ್ಮ ಪ್ಯಾಕೇಜ್ ಎಷ್ಟು ಅಂತ ಕೇಳಿದರೆ ನಾಲ್ಕರಿಂದ ಐದು ಲಕ್ಷ ಎನ್ನುತ್ತಾರೆ.. ಕೃಷಿ ಮಾಡಿ ಇಷ್ಟೊಂದು ಹಣ ದುಡಿಯೋದು ಹೇಗೆ ಎಂದು ಎಲ್ಲರೂ ಯೋಚನೆ ಮಾಡುತ್ತಾರೆ.. ಆದ್ರೂ ಇದು ಸತ್ಯ.
ಹೌದು.. ಸಿದ್ದನೂರು ಗ್ರಾಮದ ಗುರುಶಾಂತಯ್ಯ ಎಂಬ ರೈತ ತನ್ನ ನಾಲ್ಕುಗುಂಟೆಯಲ್ಲಿ 300 ಮಲ್ಲಿಗೆ ಗಿಡಗಳನ್ನು ಹಾಕಿದ್ದು, ತಿಂಗಳಿಗೆ ನಲವತ್ತು ಸಾವಿರದಿಂದ ಐವತ್ತು ಸಾವಿರ ದುಡಿಮೆ ಮಾಡುತ್ತಿದ್ದಾರೆ. ಅಲ್ಲದೇ ತಮ್ಮ ಹೊಲದಲ್ಲಿ ಮಲ್ಲಿಗೆ ಹೂವಿನ ಗಿಡಗಳನ್ನು ಬೆಳೆಸಿ, ನೆಮ್ಮದಿಯ ಬದುಕು ಕಂಡುಕೊಂಡಿದ್ದಾರೆ. ಮಲ್ಲಿಗೆ ಹೂವಿನ ಗಿಡಗಳು ಬಹಳ ಕಡಿಮೆ ನೀರಿನಲ್ಲಿ ಬೆಳೆಯುತ್ತವೆ. ಸ್ವಂತ ಕೊಳವೆಬಾವಿ ಇದೆ. ಬೇರೆಯವರನ್ನು ಅವಲಂಬಿಸಿಲ್ಲ. ಸಾಂಪ್ರದಾಯಿಕ ಬೆಳೆಗಳನ್ನು ಬೆಳೆಯುವುದರ ಬದಲು ಹೂ ಬೆಳೆದು ಅಧಿಕ ಲಾಭ ಗಳಿಸಬಹುದು ಎಂಬುದು ಗುರುಶಾಂತಯ್ಯ ಹೇಳುವ ಮಾತು.
ಮಲ್ಲಿಗೆ ಹೂವು ಬೆಳೆಯುವುದರಿಂದ ಕಡಿಮೆ ಖರ್ಚು, ಅಧಿಕ ಲಾಭ ಎಂದು ನಂಬಿರುವ ಇವರು ಮಲ್ಲಿಗೆ ಹೂವಿನ ಗಿಡಗಳನ್ನು ಬೆಳೆಸಿ ನೆಮ್ಮದಿಯ ಜೀವನ ಸಾಗಿಸುತ್ತಿದ್ದಾರೆ. ಮೊದಲು ಗುಲಾಬಿ ಹೂ ಬೆಳೆದಿದ್ದು, ಸ್ವಲ್ಪ ರಿಸ್ಕ್ ಆದ ಕಾರಣ ಮಲ್ಲಿಗೆ ಹೂ ಬೆಳೆಯುತ್ತಿದ್ದಾರೆ. ವರ್ಷ ಪೂರ್ತಿ ಬೆಳೆ ಬರುವ ಕಾರಣ ಮನೆಯ ಖರ್ಚು, ಸಣ್ಣ ಪುಟ್ಟ ಸಾಲ ತೀರಿಸಿಕೊಂಡು ಹೆಚ್ಚಿನ ಲಾಭ ಕಂಡುಕೊಂಡಿದ್ದಾರೆ. ಮನೆಯವರೇ ಹೂ ಬಿಡಿಸುವ ಕಾರಣ ಹೆಚ್ಚೇನೂ ಖರ್ಚು ಇಲ್ಲ. ಈ ಕಾರಣದಿಂದ ಉತ್ತಮ ಆದಾಯ ಗಳಿಸುತ್ತ ಖುಷಿಯಿಂದ ಬದುಕು ಸಾಗಿಸುತ್ತಿದ್ದಾರೆ. ದಾವಣಗೆರೆ ಮಾರುಕಟ್ಟೆಗೆ ಹೂ ಮಾರಾಟ ಮಾಡುವ ಇವರಿಗೆ ತಿಂಗಳಿಗೊಮ್ಮೆ ಹೂವಿನ ಬಟವಾಡೆಯಾಗುತ್ತದೆ. ಹಬ್ಬಹರಿದಿನಗಳಲ್ಲಿ ಹೂವಿನ ದರ ಹೆಚ್ಚಾಗುವ ಕಾರಣ ಕೈ ತುಂಬಾ ಹಣ ಸಿಗುತ್ತದೆ.
300 ಮಲ್ಲಿಗೆ ಹೂವಿನ ಗಿಡಗಳಿಗೆ ವಾರಕ್ಕೆ ಒಂದು ಬಾರಿ ಮದ್ದು ಸಿಂಪಡಣೆಗೆ 950 ರೂ., ತಿಂಗಳಿಗೊಂದು ಬಾರಿ ಮಲ್ಲಿಗೆ ಹೂವು ಚಿಗುರಿ ಮದ್ದು ಸಿಂಪಡಣೆಗೆ 1,200 ರೂ. ವೆಚ್ಚ ಆಗುತ್ತದೆ. 15 ದಿನಗಳಿಗೊಮ್ಮೆ ಕಳೆ ತೆಗೆಯುತ್ತಾರೆ. ಒಟ್ಟಾರೆ ಭತ್ತ ಬೆಳೆಯುವುದಕ್ಕಿಂತ ಮಲ್ಲಿಗೆ ಹೂವಿನ ಗಿಡಗಳನ್ನು ಬೆಳೆಯುವುದರಿಂದ ಉತ್ತಮ ಆದಾಯದ ಜತೆಗೆ ನೆಮ್ಮದಿಯ ಜೀವನ ಸಾಗಿಸಬಹುದು ಎಂದು ರೈತ ಹೇಳುತ್ತಾರೆ.
ಒಟ್ಟಾರೆ ಅತಿವೃಷ್ಟಿ, ಅನಾವೃಷ್ಟಿಯ ಹೊಡೆತಕ್ಕೆ ಕೃಷಿಯಿಂದ ರೈತರು ವಿಮುಖರಾಗುತ್ತಿದ್ದು, ಮಲ್ಲಿಗೆ ಹೂ ಬೆಳೆದ ಗುರುಶಾಂತಯ್ಯ ಯಶಸ್ಸಿನ ದಾರಿಯಲ್ಲಿ ಮುನ್ನಡೆದಿದ್ದಾರೆ.
#davanagere #jasmine #farmer
Our Website: https://Vijaykarnataka.com
Facebook: / vijaykarnataka
Twitter: / vijaykarnataka